Sunday, January 2, 2011

ಸಾವಿಗೀಡಾದ ಹಾಸನದ ಯೋಧನಿಗೆ ಅವಮಾನ

Soldier from Hassan insulted
ಹಾಸನ, ಜ. 01 : ಆಸ್ಸಾಂನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕರ್ನಾಟಕದ ವೀರಯೋಧನಿಗೆ ಅವಮಾನ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಲ್ಲಯ್ಯನಕೊಪ್ಪಲು ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡು ಜೀವ ತ್ಯಜಿಸಿರುವ 24 ವರ್ಷದ ದಿಲೀಪ್ ನನ್ನು ಸೇನಾ ಅಧಿಕಾರಿಗಳು ಬೆಳಗಿನ ಜಾವ 5.30ಕ್ಕೆ ಗ್ರಾಮದ ಹೊರವಲಯದಲ್ಲಿರುವ ಕೆರೆಯಂಗಳದಲ್ಲಿ ಇಟ್ಟು ವಾಪಸ್ ಆಗಿರುವುದು ಇಡೀ ಗ್ರಾಮ ರೊಚ್ಚಿಗೇಳುವಂತೆ ಮಾಡಿದೆ.

11ನೇ ಫೋರ್ಸ್ ರೆಜಿಮೆಂಟ್ ನಲ್ಲಿ ಟೆಲಿಫೋನ್ ಆಪರೇಟರ್ ಆಗಿದ್ದ ದಿಲೀಪ್ ಮದಾರ ಸೈನಿಕ ಕ್ಯಾಂಪ್ ನಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾನೆ ಎಂದು ಸೇನಾ ಅಧಿಕಾರಿಗಳು ದಿಲೀಪ್ ಕುಟುಂಬದವರಿಗೆ ತಿಳಿಸಿದ್ದರು. ಆದರೆ, ಶವವನ್ನು ಕುಟುಂಬದವರಿಗೆ ಒಪ್ಪಿಸದೆ ಹಾಗೆಯೇ ವಾಪಸ್ ಆಗಿರುವುದು ಅನುಮಾನ ಏಳುವಂತೆ ಮಾಡಿದೆ.

ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತನ ಸಾವು ಅನುಮಾನಾಸ್ಪದವಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು ಮತ್ತು ಸತ್ಯ ಏನೆಂದು ತಿಳಿಯಬೇಕು ಎಂದು ದಿಲೀಪ್ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ. ಇಂದು ದಿಲೀಪ್ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯಸಂಸ್ಕಾರಕ್ಕಾಗಿ ಇಡೀ ಗ್ರಾಮವೇ ಕಂಬನಿ ಮಿಡಿದಿದ್ದು, ಗ್ರಾಮದ ವೀರನನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡದ್ದರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
English summary
A soldier from Hassan district in Karnataka has been insulted by the indian army by placing his body in the outskirts of the village. Dilip's last rites will be performed on January 1, 2011.

No comments: